Wednesday, November 21, 2012

ಭಾರತೀಯ ಪನೋರಮಾಕ್ಕೆ ಚಾಲನೆ


ಪಣಜಿ : ಗೋವೆಯ 43 ನೇ ಚಲನಚಿತ್ರೋತ್ಸವದಲ್ಲಿ ಭಾರತೀಯ ತೋಟದ ಸುಮಗಳು ಅರಳಿದವು.
ಐನಾಕ್ಸ್ ಮೂರನೇ ಚಿತ್ರಮಂದಿರದಲ್ಲಿ ಖ್ಯಾತ ನಟ ಓಂಪುರಿ, ಭಾರತೀಯ ಪನೋರಮಾ ವಿಭಾಗವನ್ನು ಉದ್ಘಾಟಿಸಿದರು.
ಈ ವಿಭಾಗದಲ್ಲಿ ಹತ್ತುದಿನಗಳ ಕಾಲ ಕಥಾ ವಿಭಾಗದಲ್ಲಿ (ಫೀಚರ್) 20 ಮತ್ತು ಕಥೇತರ ವಿಭಾಗ (ನಾನ್ ಫೀಚರ್)ದಲ್ಲಿ 19 ಪ್ರದರ್ಶನಗೊಳ್ಳಲಿವೆ. ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ (ನ್ಯಾಷನಲ್ ಫಿಲ್ಮ್ ಆರ್ಕೈವ್ಸ್)ನ ಚಾಲಕ ಶಕ್ತಿಯಾದ ಪಿ. ಕೆ. ನಾಯರ್ ಅವರ ಕುರಿತ ಸಾಕ್ಷ್ಯಚಿತ್ರ ಶಿವೇಂದ್ರ ಸಿಂಗ್ ದುಂಗರ್ ಪುರ್ ಅವರ ನಿರ್ದೇಶಿಸಿದ "ಸೆಲ್ಯುಲಾಯಿಡ್ ಮ್ಯಾನ್" ಚಿತ್ರದ ಮೂಲಕ ವೀಕ್ಷರಿಗೆ ತೆರೆದುಕೊಂಡಿತು.
ಕೂರ್ಮಾವತಾರ ಪ್ರದರ್ಶನ
ಭಾರತೀಯ ಪನೋರಮಾ ವಿಭಾಗ 1978 ರಲ್ಲಿ ಚಿತ್ರೋತ್ಸವಕ್ಕೆ ಸೇರ್ಪಡೆಗೊಂಡಿದ್ದು, ಈ ಬಾರಿ ಗಿರೀಶ್ ಕಾಸರವಳ್ಳಿಯವರ "ಕೂರ್ಮಾವತಾರ" ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. ಅಲ್ಲದೇ ಕಳೆದ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಮರಾಠಿಯ "ದೇವೂಳ್" ಮತ್ತು "ಬ್ಯಾರಿ" ಯಲ್ಲದೇ, ಜಾನು ಬರುವಾ ಅವರ 'ಬಂಧೋನ್' ಮತ್ತಿತರ 20 ಚಲನಚಿತ್ರಗಳು ತೆರೆ ಕಾಣುತ್ತಿವೆ.

ಕಲಾತ್ಮಕ ಚಿತ್ರಗಳನ್ನು ತಲುಪಿಸಲು ಪ್ರತ್ಯೇಕ ವ್ಯವಸ್ಥೆ ಅವಶ್ಯ : ಓಂಪುರಿ


ವರದಿ : ಅರವಿಂದ ನಾವಡ
ಪಣಜಿ : ಕಲಾತ್ಮಕ ಚಿತ್ರಗಳನ್ನು ಆಸಕ್ತ ಪ್ರೇಕ್ಷಕ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಸರಕಾರ ಕೈಗೊಳ್ಳಬೇಕು ಎಂದು ಹಿರಿಯ ನಟ ಓಂಪುರಿ ಆಗ್ರಹಿಸಿದ್ದಾರೆ.
ಗೋವೆಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಲಾತ್ಮಕ ಚಿತ್ರಗಳಿಗೆ ದೊರೆಯುತ್ತಿರುವ ಸಹಕಾರವನ್ನು ಮರೆಯುವಂತಿಲ್ಲ. ಆದರೆ, ಪ್ರತಿವರ್ಷ ಸ್ವತಂತ್ರ ಸಿನಿಮಾ ತಯಾರಕರು ರೂಪಿಸುವ ನೂರಾರು ಭಾರತೀಯ ಸಿನಿಮಾಗಳು ನೈಜ ಪ್ರೇಕ್ಷಕರಿಗೆ ತಲುಪುತ್ತಿಲ್ಲ. ಅವು ಕೆಲವೇ ಪ್ರದರ್ಶನಗಳಿಗೆ ಸೀಮಿತವಾಗುತ್ತಿವೆ' ಎಂದು ವಿಷಾದಿಸಿದರು.
"ಹೆಚ್ಚಿನ ಜನ ಸಮುದಾಯಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವತ್ತ ಪ್ರತ್ಯೇಕ ಚಾನೆಲ್ ನ್ನು ಆರಂಭಿಸುವ ಅಥವಾ ದೂರದರ್ಶನದಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ಬಗ್ಗೆ ಕೇಂದ್ರ ಸರಕಾರ ಆಲೋಚಿಸಬೇಕು. ಸೃಜನಶೀಲಕೃತಿಗಳು ಸಂಬಂಧಪಟ್ಟ ಆಸಕ್ತ ಸಮುದಾಯಕ್ಕೆ ತಲುಪಿಸುವುದು ಈ ಹೊತ್ತಿನ ತುರ್ತು ಅಗತ್ಯದ ಕೆಲಸ' ಎಂದು ಹೇಳಿದರು.
"ಪ್ರಸ್ತುತ ಇರುವ ಚಲನಚಿತ್ರ ವಿತರಣಾ ವ್ಯವಸ್ಥೆಯನ್ನು ನಾನು ದೂರುತ್ತಿಲ್ಲ. ಅವರು ಅದನ್ನು ವ್ಯವಹಾರವನ್ನಾಗಿ ಮಾಡಿಕೊಂಡವರು. ಆದ್ದರಿಂದ, ಇಂಥ ಸ್ವತಂತ್ರ ಸಿನಿ ತಯಾರಕರು ರೂಪಿಸುವ ಸಿನಿಮಾಗಳನ್ನು ತಲುಪಿಸುವ ಕೆಲಸಕ್ಕೆ ಸರಕಾರ ಮನಸ್ಸು ಮಾಡಬೇಕು' ಎಂದು ಹೇಳಿದರು.
ನೀತಿನಿರೂಪಕರು ನೋಡಲಿ
ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಸಮಸ್ಯೆಗಳನ್ನೇ ಪ್ರತಿಫಲಿಸುವ ರೀತಿಯಲ್ಲಿ ರೂಪಿತವಾಗುತ್ತಿದ್ದು, ನೀತಿ ನಿರೂಪಕರು ಇವುಗಳನ್ನು ವೀಕ್ಷಿಸುವುದನ್ನು ರೂಢಿಸಿಕೊಳ್ಳಬೇಕು. ನಾನು ಇತ್ತೀಚೆಗೆ "ಚಕ್ರವ್ಯೂಹ" ಸಿನಿಮಾದಲ್ಲಿ ನಟಿಸಿದೆ. ಅದು ನಕ್ಸಲ್ ಸಮಸ್ಯೆ ಕುರಿತಾದುದು. ಇಂದು ದೇಶದ ಹಲವೆಡೆ ಈ ಸಮಸ್ಯೆ ಉದ್ಭವಿಸಿದೆ. ಸಿನಿಮಾ ನಿರ್ಮಿಸುವವರು ಸಾಕಷ್ಟು ಅಧ್ಯಯನ ಕೈಗೊಂಡು ತೆರೆಯ ಮೇಲೆ ತಂದಿರುತ್ತಾರೆ. ಇಂಥ ಚಿತ್ರಗಳನ್ನು ವೀಕ್ಷಿಸಿದರೆ ಸಮಸ್ಯೆಯ ರೂಪ ಅರಿವಾದೀತು. ಸಮಸ್ಯೆಯ ನಿವಾರಣೆಗೆ ಪರಿಹಾರ ರೂಪಿಸಲು ನೆರವಾದೀತು' ಎಂದರು.
ಇದಕ್ಕೆ ಮುನ್ನ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಉದಯಕುಮಾರ್ ವರ್ಮ, "12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತೀಯ ಚಲನಚಿತ್ರ ಪರಂಪರೆಯನ್ನು ಬೆಳೆಸುವತ್ತ ಪೂರಕವಾಗುವಂತೆ 400 ಕೋಟಿ ರೂ. ಅಂದಾಜಿನ ರಾಷ್ಟ್ರೀಯ ಚಲನಚಿತ್ರ ಮಿಷನ್ ಪ್ರಾರಂಭಿಸಲಾಗುತ್ತಿದೆ. ಹಾಗೆಯೇ, ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರಸಾರಕ್ಕೂ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ. ಸಾಕ್ಷ್ಯಚಿತ್ರ ನಿರ್ಮಿಸುವವರಿಗೆ ಹಣದ ಸಹಾಯ ಒದಗಿಸುವುದು ಹಾಗೂ ಅವುಗಳ ಪ್ರಸಾರಕ್ಕೆ ದೂರದರ್ಶನದಲ್ಲಿ ಸೂಕ್ತ ಅವಕಾಶ ಕಲ್ಪಿಸಲು ಯೋಚಿಸಲಾಗುತ್ತಿದೆ.ಕಲಾತ್ಮಕ ಸಿನಿಮಾಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗವಿದ್ದರೆ ತಿಳಿಸಿ' ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಕಥಾ ಮತ್ತು ಕಥೇತರ ವಿಭಾಗದ ಜ್ಯೂರಿಗಳನ್ನು ಸನ್ಮಾನಿಸಲಾಯಿತು. ಶ್ಯಾಮ್ ಬೆನಗಲ್, ಪಿ. ಕೆ. ನಾಯರ್, ಬುದ್ಧದೇವ್ ದಾಸ್ ಗುಪ್ತ ಮತ್ತಿತರರು ಭಾಗವಹಿಸಿದ್ದರು.

Tuesday, November 20, 2012

ನವಿಲಿನ ಕುಣಿತಕ್ಕೆ ಮತ್ತಷ್ಟು ರಂಗು ಬೇಕಿತ್ತು


ವರದಿ : ಅರವಿಂದ ನಾವಡ
43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಯನ್ನು ಕಂಡವರಿಗೆ ಅನ್ನಿಸಿದ್ದು ಇದೇ. ತೀರಾ ಸಪ್ಪೆ ಎನಿಸುವ ನಿರೂಪಣೆಯಿಂದ ಹಿಡಿದು, ಹನ್ನೊಂದು ದಿನದ ಸಂಭ್ರಮಕ್ಕೆ ಗೆಜ್ಜೆ ಕಟ್ಟುವ ಕೆಲಸವಾಗಲೇ ಇಲ್ಲ.
ಈ ಬಾರಿಯದು ಬರಿದೇ 43 ನೇ ಚಿತ್ರೋತ್ಸವವಾಗಿರಲಿಲ್ಲ. ಜತೆಗೆ ಭಾರತೀಯ ಸಿನಿಮಾದ ಶತಮಾನೋತ್ಸವ ವರ್ಷವೂ ಆಗಿತ್ತು. ಆದರೆ, ಇಡೀ ಉದ್ಘಾಟನಾ ಸಮಾರಂಭದಲ್ಲಿ ಆ ಉತ್ಸಾಹವೇ ಇರಲಿಲ್ಲ.
ಹಲವು ಕಾರಣಗಳಿಂದ ಬಹುಮುಖ್ಯ ಉತ್ಸವವಾಗಿರುವ ಇದರ ಉದ್ಘಾಟನೆ ಬಹಳಷ್ಟು ಸಂಭ್ರಮ ಮತ್ತು ಬದುಕಿನ ಸವಿನೆನಪಾಗಿ ಉಳಿದೀತೆಂದು ಬಂದವರಿಗೆ ಸಿಕ್ಕಿದ್ದು ಮತ್ತೊಂದು ಸಮಾರಂಭವಷ್ಟೇ.
ಔಪಚಾರಿಕ ಸಮಾರಂಭವನ್ನು ಹೊರತುಪಡಿಸಿದರೆ ಬೇರೇನೂ ಇರಲಿಲ್ಲ. ಸರೋಜ್ ಖಾನ್ ಸಂಯೋಜಿಸಿದ ನೂರು ವರ್ಷ ಭಾರತೀಯ ಸಿನಿಮಾ ಕುರಿತ “ನೃತ್ಯರೂಪಕ” ಒಂದಷ್ಟು ಹೊತ್ತು ರಂಜಿಸಿದರೆ, ಕೈಲಾಸ್ ಖೇರ್ ಅವರ ಒಂದಿಷ್ಟು ಗೀತೆಗಳು ಖುಷಿ ನೀಡಿದವು.
‘ಕಾರ್ಯಕ್ರಮ ಇನ್ನಷ್ಟು ಗ್ರ್ಯಾಂಡ್ ಆಗಿರಬೇಕಿತ್ತು’ ಎಂದು ಹೇಳಿದವರು ಗೋವಾದ ಶ್ಯಾಂ ಸುಂದರ್. ಇಂಥ ಅಭಿಪ್ರಾಯ ಹಲವೆಡೆ ಕೇಳಿಬಂದಿತು.
ಟ್ರ್ಯಾಕ್
ಕೈಲಾಸ್ ಖೇರ್, ಸುಮಾರು ಏಳೆಂಟು ಹಾಡುಗಳನ್ನು ಹಾಡಿದರು. ಅದೂ ನೈಜಗಾನವೆನಿಸಿರಲಿಲ್ಲ. ಹಿಂದೆ ಟ್ರ್ಯಾಕ್ ಹಾಕಿಕೊಂಡು ಫಾಲೋ ಮಾಡಿದಂತಿತ್ತು.
ಎಕ್ಕ ರಾಜರಾಣಿ
ಇಡೀ ಚಲನಚಿತ್ರೋತ್ಸವದಲ್ಲಿ ಕನ್ನಡದ ಮಾತು ಕೇಳಿದ್ದೆಂದರೆ ಕೈಲಾಶ್ ಖೇರ್, "ಜಾಕಿ" ಚಿತ್ರದ "ಎಕ್ಕ ರಾಜರಾಣಿ" ಗೀತೆಯನ್ನು ಟ್ರ್ಯಾಕ್ ನಲ್ಲಿ ಹೇಳಿದ್ದು. ಇಷ್ಟು ಬಿಟ್ಟರೆ ಬೇರೇನೂ ಇರಲಿಲ್ಲ.
ಮೊದಲ ಚಿತ್ರಕ್ಕೆ ಫುಲ್ ರಶ್
ಲೈಫ್ ಆಫ್ ಫೈ ಚಿತ್ರಕ್ಕೆ ಸಿನಿಮಾ ಮಂದಿರ ಹೌಸ್ ಫುಲ್. ಕಲಾ ಅಕಾಡೆಮಿಯಲ್ಲಿ ಏರ್ಪಡಿಸಲಾಗಿದ್ದ ಉತ್ಸವದ ಮೊದಲ ಚಿತ್ರಕ್ಕೆ ಸಿನಿಮಾ ಮಂದಿರ ಭರ್ತಿಯಾಗಿ ಎರಡೂ ಕಡೆ ಸಾಲಾಗಿ ನಿಂತುಕೊಂಡೇ ಇಡೀ ಸಿನಿಮಾ ವೀಕ್ಷಿಸಿದವರು ಹಲವರು.
ಉದ್ಘಾಟನೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಚಿತ್ರಮಂದಿರದತ್ತ ಎಲ್ಲರೂ ದೌಡಾಯಿಸಿದ್ದರಿಂದ ಸ್ವಲ್ಪ ನೂಕು ನುಗ್ಗಲಿನ ಅನುಭವವಾಯಿತು. ಆದರೂ ಗಂಭೀರ ಸಮಸ್ಯೆಯಾಗಲಿಲ್ಲ. ಥ್ರೀಡಿ ಚಲನಚಿತ್ರವಾಗಿದ್ದರಿಂದ ಹಲವರು ಇಷ್ಟ ಪಟ್ಟರು.

ಸಿನಿಮಾ ನನ್ನಿಷ್ಟದ ಮಾಧ್ಯಮ : ಜಾನುಸಿ


ಪಣಜಿ : ಬಹುನಿರೀಕ್ಷಿತ ನವಿಲು ಕುಣಿತ ಆರಂಭಗೊಂಡಿದೆ !
ಹನ್ನೊಂದುದಿನ ಇನ್ನೇನಿದ್ದರೂ ನವಿಲಿನ ಕುಣಿತವಷ್ಟೇ. ಕಣ್ತುಂಬಿಕೊಳ್ಳುವ ಉತ್ಸಾಹವಿರಬೇಕು ಅಷ್ಟೇ.
ಗೋವೆಯ ರಾಜಧಾನಿ ಪಣಜಿಯ ಕಲಾ ಅಕಾಡೆಮಿ ಬಳಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಮಂಗಳವಾರ ಸಂಜೆ ಖ್ಯಾತ ನಟ ಅಕ್ಷಯ್ ಕುಮಾರ್ 43 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
"ನನ್ನ ಬದುಕಿಗೆ ಹೆಚ್ಚು ಖುಷಿಯನ್ನು ತುಂಬಿರುವುದು ಈ ಸಿನಿಮಾ. ಚಿಕ್ಕಂದಿನಿಂದಲೂ ಮೋಹವಾಗಿಯೇ ಉಳಿದಿದ್ದ ಸಿನಿಮಾ ಮಾಧ್ಯಮ ಇಂದಿಗೂ ಆ ಮೋಹಕತೆಯನ್ನು ಉಳಿಸಿಕೊಂಡಿದೆ, ಇಲ್ಲಿವರೆಗೂ ತಂದು ನಿಲ್ಲಿಸಿರುವ ಈ ಮಾಧ್ಯಮವನ್ನು ಮರೆಯಲಾಗದು’ ಎಂದವರು ಅಕ್ಷಯ್ ಕುಮಾರ್.
ಹೆಸರಾಂತ ಪೊಲಿಶ್ ಚಿತ್ರ ನಿರ್ದೇಶಕ ಕ್ರಿಸ್ಟೋಫ್ ಜಾನುಸಿಯವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ, “ಕೇಂದ್ರ ಸರಕಾರ ಸಿನಿಮಾ ಮಾಧ್ಯಮವನ್ನು ಹೆಚ್ಚು ಜನಪ್ರಿಯಗೊಳಿಸಲು ಸಾಕಷ್ಟು ಯೋಜನೆ ಹಮ್ಮಿಕೊಂಡಿದೆ. ರಾಷ್ಟ್ರೀಯ ಸಿನಿಮಾ ಪಾರಂಪರಿಕ ಮಿಷನ್ ಸ್ಥಾಪಿಸುವ ಇರಾದೆಯನ್ನು ಹೊಂದಿದ್ದು, ಸದ್ಯವೇ ಜಾರಿಗೊಳ್ಳಲಿದೆ’ ಎಂದರು.
ಇದೇ ಸಂದರ್ಭದಲ್ಲಿ, “ಅತ್ಯಂತ ಪ್ರಭಾವಶಾಲಿಯಾಧ ಸಿನಿಮಾ ಮಾಧ್ಯಮವನ್ನು ಬಳಸಿಕೊಂಡು ಇನ್ನಷ್ಟು ಬೃಹತ್ ಪ್ರಮಾಣದಲ್ಲಿ ಜನರನ್ನು ರಚನಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು’ ಎಂದು ಸಿನಿಮಾ ನಿರ್ದೇಶಕರನ್ನು ಮನವಿ ಮಾಡಿದರು.
ಜೀವಮಾನ ಸಾಧನೆಗೆ ಪ್ರಶಸ್ತಿ ಪುರಸ್ಕರಿಸಿದ ಕ್ರಿಸ್ಟೋಫ್ ಜಾನುಸಿ, “ ಗೌರವ ಇನ್ನಷ್ಟು ಸಿನಿಮಾಗಳನ್ನು ಮಾಡುವ ಹುರುಪು ತುಂಬಿದೆ,. ಚಲಿಸುವ ಚಿತ್ರಗಳು ಮತ್ತು ಧ್ವನಿಯನ್ನು ಬಳಸಿಕೊಂಡು ನಮ್ಮ ಜೀವನದ ಅನುಭವವನ್ನು ಕಥೆಯಾಗಿ ಹೇಳಲು ಇರುವ  ಮಾಧ್ಯಮದಿಂದ ದೂರವುಳಿಯಲು ನನ್ನಿಂದಾಗದು. 21 ನೇ ಶತಮಾನವನ್ನು ಏಷ್ಯಾದ ಶತಮಾನವೆಂದು ಹೇಳಲಾಗುತ್ತಿದೆ. ಆದರೆ, ನನ್ನ ಅನಿಸಿಕೆಯಲ್ಲಿ ಅದು ಭಾರತದ ಶತಮಾನ’ಎಂದರು.
ಗೋವಾವನ್ನು ಅತ್ಯುತ್ತಮ ಚಿತ್ರನಗರಿಯನ್ನಾಗಿಸುವ ಹೊಣೆ ಎಂಟು ವರ್ಷದ ಹಿಂದೆ ಕೈಗೆತ್ತಿಕೊಂಡಿದ್ದೆ. ಈ ವರ್ಷ ಆ ಅಭಿದಾನ ದೊರೆತಿದೆ. ಆದರೆ ನಮ್ಮ ಕೆಲಸ ಇಲ್ಲಿಗೆ ನಿಲ್ಲದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಮತ್ತಷ್ಟು ವೈಭವೋಪೇತಗೊಳಿಸುವ ಕೆಲಸ ಇಂದಿನಿಂದ ಆರಂಭಗೊಳ್ಳಲಿದೆ ಎಂದವರು ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್.
ಇದೇ ಸಂದರ್ಭದಲ್ಲಿ ಸಿನಿಮಾ ತೀರ್ಪುಗಾರರಿಗೆ ಸನ್ಮಾನಿಸಲಾಯಿತು. ಅಸ್ಸಾಮಿ ಚಿತ್ರ ನಿರ್ದೇಶಕ ಜಾನು ಬರುವಾ ಅವರನ್ನು ಗೌರವಿಸಲಾಯಿತು. ಉತ್ಸವದ ಆರಂಭದ ಚಿತ್ರ “ಲೈಫ್ ಆಫ್ ಫೈ” ನಲ್ಲಿ ನಟಿಸಿರುವ ತಬು ಮತ್ತು ಇರ್ಫಾನ್ ಖಾನ್ ರನ್ನೂ ಸನ್ಮಾನಿಸಲಾಯಿತು. ಗೋವಾದ ರಾಜ್ಯಪಾಲರಾದ ವಾಂಚೂ, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಉದಯ ಕುಮಾರ್ ವರ್ಮ, ಗೋವಾದ ಕಾರ್ಯದರ್ಶಿ ವಿಜಯನ್, ನಟಿ ಕಾಜಲ್ ಅಗರ್ವಾಲ್ ಉಪಸ್ಥಿತರಿದ್ದರು.

Saturday, November 17, 2012

ಗೋವಾ ಚಲನಚಿತ್ರೋತ್ಸವದಲ್ಲಿ ಕೂರ್ಮಾವತಾರ


ಗೋವಾದಲ್ಲಿ ನವೆಂಬರ್ 20 ರಿಂದ 30 ರವರೆಗೆ ನಡೆಯಲಿರುವ 43 ನೇ ಆಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಗಿರೀಶ್ ಕಾಸರವಳ್ಳಿ ನಿರ್ದೇಶನದ “ಕೂರ್ಮಾವತಾರ’ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

“ಭಾರತೀಯ ಪನೋರಮಾ’ ವಿಭಾಗದಲ್ಲಿ ಒಟ್ಟು ೨೦ ಚಲನಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ಕನ್ನಡದ ಪೈಕಿ ಇದೊಂದೇ ಚಲನಚಿತ್ರ ಆಯ್ಕೆಯಾಗಿದೆ. ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿರುವ ಈ ಚಿತ್ರ ರಾಜ್ಯದಲ್ಲಿ ಇನ್ನೂ ತೆರೆ ಕಾಣಬೇಕಿದೆ.

ಉಳಿದಂತೆ “ಬಂದೋನ್’ (ಅಸ್ಸಾಮಿ-ಜಾನುಬರುವಾ), ಶಬ್ದೊ (ಬಂಗಾಳಿ-ಕೌಶಿಕ್ ಗಂಗೂಲಿ), ಚಿತ್ರಾಂಗದಾ(ಬಂಗಾಳಿ-ಋತುಪರ್ಣ ಘೋಷ್), ಏಳಾರ್ ಚಾರ್ ಅಧ್ಯಾಯ (ಬಂಗಾಳಿ-ಬಪ್ಪದಿತ್ಯ ಬಂಡೋಪಾಧ್ಯಾಯ), ದೇಶ್ವಾ(ಭೋಜ್‌ಪುರಿ-ನಿತಿನ್ ಚಂದ್ರ), ಬ್ಯಾರಿ(ಬ್ಯಾರಿ-ಸುವೀರನ್), ಲೆಸನ್ಸ್ ಇನ್ ಫಾರ್ಗೆಟಿಂಗ್ (ಇಂಗ್ಲಿಷ್-ಉನ್ನಿ ವಿಜಯನ್), ಗಂಗೂಬಾಯಿ ಹಿಂದಿ ಪಾರ್ಟಲಿ (ಮರಾಠಿ-ಪ್ರಿಯಾ ಕೃಷ್ಣಸ್ವಾಮಿ), ಐ.ಡಿ ಹಿಂದಿ (ಇಂಗ್ಲಿಷ್-ಕಮಲ್ ಕೆ.ಎಂ), ದಿಗಂತ್(ಕೊಂಕಣಿ-ಧ್ಯಾನೇಶ್ ಮೋಘೆ), ಆಕಾಂಕ್ಷಿತೆ ನಿರಂ(ಮಲಯಾಳಂ-ಡಾ. ಬಿಜು), ಭೂಮಿಯುದೆ ಅವಕಾಸಿಕಲ್ (ಮಲಯಾಳಂ-ಟಿ.ವಿ.ಚಂದ್ರನ್), ಓಝಿಮುರಿ(ಮಲಯಾಳಂ-ಮಧುಪಾಲ್), ಇಥ್ರಮಾತ್ರಂ(ಮಲಯಾಳಂ-ಕೆ.ಗೋಪಿನಾಥನ್), ಮಂಜಾದಿಕುರು(ಮಲಯಾಳಂ-ಅಂಜಲಿ ಮೆನನ್), ಸಂಹಿತಾ (ಮರಾಠಿ-ಸುಮಿತ್ರಾ ಭಾವೆ ಮತ್ತು ಸುನಿಲ್ ಸುಖ್ತಂಕರ್), ಡಿಯೋಲ್(ಮರಾಠಿ-ಉಮೇಶ್ ವಿನಾಯಕ್ ಕುಲಕರ್ಣಿ), ಅನ್ಹೆ ಘೋರೆ ದಾ ದಾನ್(ಪಂಚಾಬಿ-ಗುರ‍್ವಿಂದರ್ ಸಿಂಗ್), ವಗಾಯೀ ಸೋಡಾ(ತಮಿಳು-ಎ.ಸರ‍್ಕುಣಮ್) ಇವು ಪ್ರದರ್ಶನಗೊಳ್ಳಲಿರುವ ಉಳಿದ ಚಲನಚಿತ್ರಗಳು. ಇದಲ್ಲದೇ, ಚಲನಚಿತ್ರೇತರ ವಿಭಾಗದಲ್ಲಿ ಸುಮಾರು೧೯ ವಿವಿಧ ಭಾರತೀಯ ಭಾಷೆಯ ದೃಶ್ಯಕೃತಿಗಳು ಪ್ರದರ್ಶನಗೊಳ್ಳಲಿವೆ.

ಉತ್ಸವವನ್ನು ನ. ೨೦ ರಂದು ಖ್ಯಾತನಟ ಅಕ್ಷಯ್ ಕುಮಾರ್ ಉದ್ಘಾಟಿಸುವರು. ಗೋವಾದ ರಾಜಧಾನಿ ಪಣಜಿಯಲ್ಲಿರುವ ಕಲಾ ಅಕಾಡೆಮಿಯ ದರಾಯ ಕಲಾಸಂಗಮ್ ಮತ್ತು ದೀನನಾಥ್ ಮಂಗೇಶ್ಕರ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದೆ.
ಒಟ್ಟು ಹನ್ನೊಂದು ದಿನಗಳ ಉತ್ಸವದಲ್ಲಿ ೨೦೦ ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಂತಾರಾಷ್ಟ್ರೀಯ ವಿಭಾಗದಲ್ಲಿನ ಸ್ಪರ್ಧೆಯಲ್ಲದೇ, ಜಾಗತಿಕ ಸಿನಿಮಾ, ವಿದೇಶಿ ನಿರ್ದೇಶಕರ ಹಲವು ಅತ್ಯುತ್ತಮ ಸಿನಿಮಾಗಳು (ವಾಚಿಕೆ ಮಾದರಿ), ನೆನಪು, ನಿರ್ದಿಷ್ಟ ದೇಶಗಳ ಮೇಲೆ ಬೆಳಕು ಚೆಲ್ಲುವಂಥ ಸಿನಿಮಾಗಳು, ಭಾರತೀಯ ಪನೋರಮಾ, ಭಾರತೀಯ ನಿರ್ದೇಶಕರ ವಾಚಿಕೆ ಮತ್ತು ಸ್ಮರಣೆ, ತಾಂತ್ರಿಕ ಕಾರ‍್ಯಾಗಾರಗಳು ನಡೆಯಲಿವೆ.
ಭಾರತೀಯ ಸಿನಿಮಾ ನೂರು ವರ್ಷದ ನೆನಪಿಗೆ “ಶತಮಾನೋತ್ಸವ ಪ್ರಶಸ್ತಿ’ ಪ್ರಶಸ್ತಿ (ಬೆಳ್ಳಿ ಪಾರಿತೋಷಕ, ಹತ್ತು ಲಕ್ಷ ರೂ. ನಗದು)ಯನ್ನು ನೀಡಲಾಗುತ್ತಿದೆ.

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms