Showing posts with label ಐಎಫ್ ಎಫ್ ಐ 2012 ಗೋವಾ. Show all posts
Showing posts with label ಐಎಫ್ ಎಫ್ ಐ 2012 ಗೋವಾ. Show all posts

Wednesday, November 21, 2012

ಕಲಾತ್ಮಕ ಚಿತ್ರಗಳನ್ನು ತಲುಪಿಸಲು ಪ್ರತ್ಯೇಕ ವ್ಯವಸ್ಥೆ ಅವಶ್ಯ : ಓಂಪುರಿ


ವರದಿ : ಅರವಿಂದ ನಾವಡ
ಪಣಜಿ : ಕಲಾತ್ಮಕ ಚಿತ್ರಗಳನ್ನು ಆಸಕ್ತ ಪ್ರೇಕ್ಷಕ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಸರಕಾರ ಕೈಗೊಳ್ಳಬೇಕು ಎಂದು ಹಿರಿಯ ನಟ ಓಂಪುರಿ ಆಗ್ರಹಿಸಿದ್ದಾರೆ.
ಗೋವೆಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಲಾತ್ಮಕ ಚಿತ್ರಗಳಿಗೆ ದೊರೆಯುತ್ತಿರುವ ಸಹಕಾರವನ್ನು ಮರೆಯುವಂತಿಲ್ಲ. ಆದರೆ, ಪ್ರತಿವರ್ಷ ಸ್ವತಂತ್ರ ಸಿನಿಮಾ ತಯಾರಕರು ರೂಪಿಸುವ ನೂರಾರು ಭಾರತೀಯ ಸಿನಿಮಾಗಳು ನೈಜ ಪ್ರೇಕ್ಷಕರಿಗೆ ತಲುಪುತ್ತಿಲ್ಲ. ಅವು ಕೆಲವೇ ಪ್ರದರ್ಶನಗಳಿಗೆ ಸೀಮಿತವಾಗುತ್ತಿವೆ' ಎಂದು ವಿಷಾದಿಸಿದರು.
"ಹೆಚ್ಚಿನ ಜನ ಸಮುದಾಯಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವತ್ತ ಪ್ರತ್ಯೇಕ ಚಾನೆಲ್ ನ್ನು ಆರಂಭಿಸುವ ಅಥವಾ ದೂರದರ್ಶನದಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ಬಗ್ಗೆ ಕೇಂದ್ರ ಸರಕಾರ ಆಲೋಚಿಸಬೇಕು. ಸೃಜನಶೀಲಕೃತಿಗಳು ಸಂಬಂಧಪಟ್ಟ ಆಸಕ್ತ ಸಮುದಾಯಕ್ಕೆ ತಲುಪಿಸುವುದು ಈ ಹೊತ್ತಿನ ತುರ್ತು ಅಗತ್ಯದ ಕೆಲಸ' ಎಂದು ಹೇಳಿದರು.
"ಪ್ರಸ್ತುತ ಇರುವ ಚಲನಚಿತ್ರ ವಿತರಣಾ ವ್ಯವಸ್ಥೆಯನ್ನು ನಾನು ದೂರುತ್ತಿಲ್ಲ. ಅವರು ಅದನ್ನು ವ್ಯವಹಾರವನ್ನಾಗಿ ಮಾಡಿಕೊಂಡವರು. ಆದ್ದರಿಂದ, ಇಂಥ ಸ್ವತಂತ್ರ ಸಿನಿ ತಯಾರಕರು ರೂಪಿಸುವ ಸಿನಿಮಾಗಳನ್ನು ತಲುಪಿಸುವ ಕೆಲಸಕ್ಕೆ ಸರಕಾರ ಮನಸ್ಸು ಮಾಡಬೇಕು' ಎಂದು ಹೇಳಿದರು.
ನೀತಿನಿರೂಪಕರು ನೋಡಲಿ
ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಸಮಸ್ಯೆಗಳನ್ನೇ ಪ್ರತಿಫಲಿಸುವ ರೀತಿಯಲ್ಲಿ ರೂಪಿತವಾಗುತ್ತಿದ್ದು, ನೀತಿ ನಿರೂಪಕರು ಇವುಗಳನ್ನು ವೀಕ್ಷಿಸುವುದನ್ನು ರೂಢಿಸಿಕೊಳ್ಳಬೇಕು. ನಾನು ಇತ್ತೀಚೆಗೆ "ಚಕ್ರವ್ಯೂಹ" ಸಿನಿಮಾದಲ್ಲಿ ನಟಿಸಿದೆ. ಅದು ನಕ್ಸಲ್ ಸಮಸ್ಯೆ ಕುರಿತಾದುದು. ಇಂದು ದೇಶದ ಹಲವೆಡೆ ಈ ಸಮಸ್ಯೆ ಉದ್ಭವಿಸಿದೆ. ಸಿನಿಮಾ ನಿರ್ಮಿಸುವವರು ಸಾಕಷ್ಟು ಅಧ್ಯಯನ ಕೈಗೊಂಡು ತೆರೆಯ ಮೇಲೆ ತಂದಿರುತ್ತಾರೆ. ಇಂಥ ಚಿತ್ರಗಳನ್ನು ವೀಕ್ಷಿಸಿದರೆ ಸಮಸ್ಯೆಯ ರೂಪ ಅರಿವಾದೀತು. ಸಮಸ್ಯೆಯ ನಿವಾರಣೆಗೆ ಪರಿಹಾರ ರೂಪಿಸಲು ನೆರವಾದೀತು' ಎಂದರು.
ಇದಕ್ಕೆ ಮುನ್ನ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಉದಯಕುಮಾರ್ ವರ್ಮ, "12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತೀಯ ಚಲನಚಿತ್ರ ಪರಂಪರೆಯನ್ನು ಬೆಳೆಸುವತ್ತ ಪೂರಕವಾಗುವಂತೆ 400 ಕೋಟಿ ರೂ. ಅಂದಾಜಿನ ರಾಷ್ಟ್ರೀಯ ಚಲನಚಿತ್ರ ಮಿಷನ್ ಪ್ರಾರಂಭಿಸಲಾಗುತ್ತಿದೆ. ಹಾಗೆಯೇ, ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರಸಾರಕ್ಕೂ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ. ಸಾಕ್ಷ್ಯಚಿತ್ರ ನಿರ್ಮಿಸುವವರಿಗೆ ಹಣದ ಸಹಾಯ ಒದಗಿಸುವುದು ಹಾಗೂ ಅವುಗಳ ಪ್ರಸಾರಕ್ಕೆ ದೂರದರ್ಶನದಲ್ಲಿ ಸೂಕ್ತ ಅವಕಾಶ ಕಲ್ಪಿಸಲು ಯೋಚಿಸಲಾಗುತ್ತಿದೆ.ಕಲಾತ್ಮಕ ಸಿನಿಮಾಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗವಿದ್ದರೆ ತಿಳಿಸಿ' ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಕಥಾ ಮತ್ತು ಕಥೇತರ ವಿಭಾಗದ ಜ್ಯೂರಿಗಳನ್ನು ಸನ್ಮಾನಿಸಲಾಯಿತು. ಶ್ಯಾಮ್ ಬೆನಗಲ್, ಪಿ. ಕೆ. ನಾಯರ್, ಬುದ್ಧದೇವ್ ದಾಸ್ ಗುಪ್ತ ಮತ್ತಿತರರು ಭಾಗವಹಿಸಿದ್ದರು.

Saturday, November 17, 2012

ಗೋವಾ ಚಲನಚಿತ್ರೋತ್ಸವದಲ್ಲಿ ಕೂರ್ಮಾವತಾರ


ಗೋವಾದಲ್ಲಿ ನವೆಂಬರ್ 20 ರಿಂದ 30 ರವರೆಗೆ ನಡೆಯಲಿರುವ 43 ನೇ ಆಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಗಿರೀಶ್ ಕಾಸರವಳ್ಳಿ ನಿರ್ದೇಶನದ “ಕೂರ್ಮಾವತಾರ’ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

“ಭಾರತೀಯ ಪನೋರಮಾ’ ವಿಭಾಗದಲ್ಲಿ ಒಟ್ಟು ೨೦ ಚಲನಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ಕನ್ನಡದ ಪೈಕಿ ಇದೊಂದೇ ಚಲನಚಿತ್ರ ಆಯ್ಕೆಯಾಗಿದೆ. ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿರುವ ಈ ಚಿತ್ರ ರಾಜ್ಯದಲ್ಲಿ ಇನ್ನೂ ತೆರೆ ಕಾಣಬೇಕಿದೆ.

ಉಳಿದಂತೆ “ಬಂದೋನ್’ (ಅಸ್ಸಾಮಿ-ಜಾನುಬರುವಾ), ಶಬ್ದೊ (ಬಂಗಾಳಿ-ಕೌಶಿಕ್ ಗಂಗೂಲಿ), ಚಿತ್ರಾಂಗದಾ(ಬಂಗಾಳಿ-ಋತುಪರ್ಣ ಘೋಷ್), ಏಳಾರ್ ಚಾರ್ ಅಧ್ಯಾಯ (ಬಂಗಾಳಿ-ಬಪ್ಪದಿತ್ಯ ಬಂಡೋಪಾಧ್ಯಾಯ), ದೇಶ್ವಾ(ಭೋಜ್‌ಪುರಿ-ನಿತಿನ್ ಚಂದ್ರ), ಬ್ಯಾರಿ(ಬ್ಯಾರಿ-ಸುವೀರನ್), ಲೆಸನ್ಸ್ ಇನ್ ಫಾರ್ಗೆಟಿಂಗ್ (ಇಂಗ್ಲಿಷ್-ಉನ್ನಿ ವಿಜಯನ್), ಗಂಗೂಬಾಯಿ ಹಿಂದಿ ಪಾರ್ಟಲಿ (ಮರಾಠಿ-ಪ್ರಿಯಾ ಕೃಷ್ಣಸ್ವಾಮಿ), ಐ.ಡಿ ಹಿಂದಿ (ಇಂಗ್ಲಿಷ್-ಕಮಲ್ ಕೆ.ಎಂ), ದಿಗಂತ್(ಕೊಂಕಣಿ-ಧ್ಯಾನೇಶ್ ಮೋಘೆ), ಆಕಾಂಕ್ಷಿತೆ ನಿರಂ(ಮಲಯಾಳಂ-ಡಾ. ಬಿಜು), ಭೂಮಿಯುದೆ ಅವಕಾಸಿಕಲ್ (ಮಲಯಾಳಂ-ಟಿ.ವಿ.ಚಂದ್ರನ್), ಓಝಿಮುರಿ(ಮಲಯಾಳಂ-ಮಧುಪಾಲ್), ಇಥ್ರಮಾತ್ರಂ(ಮಲಯಾಳಂ-ಕೆ.ಗೋಪಿನಾಥನ್), ಮಂಜಾದಿಕುರು(ಮಲಯಾಳಂ-ಅಂಜಲಿ ಮೆನನ್), ಸಂಹಿತಾ (ಮರಾಠಿ-ಸುಮಿತ್ರಾ ಭಾವೆ ಮತ್ತು ಸುನಿಲ್ ಸುಖ್ತಂಕರ್), ಡಿಯೋಲ್(ಮರಾಠಿ-ಉಮೇಶ್ ವಿನಾಯಕ್ ಕುಲಕರ್ಣಿ), ಅನ್ಹೆ ಘೋರೆ ದಾ ದಾನ್(ಪಂಚಾಬಿ-ಗುರ‍್ವಿಂದರ್ ಸಿಂಗ್), ವಗಾಯೀ ಸೋಡಾ(ತಮಿಳು-ಎ.ಸರ‍್ಕುಣಮ್) ಇವು ಪ್ರದರ್ಶನಗೊಳ್ಳಲಿರುವ ಉಳಿದ ಚಲನಚಿತ್ರಗಳು. ಇದಲ್ಲದೇ, ಚಲನಚಿತ್ರೇತರ ವಿಭಾಗದಲ್ಲಿ ಸುಮಾರು೧೯ ವಿವಿಧ ಭಾರತೀಯ ಭಾಷೆಯ ದೃಶ್ಯಕೃತಿಗಳು ಪ್ರದರ್ಶನಗೊಳ್ಳಲಿವೆ.

ಉತ್ಸವವನ್ನು ನ. ೨೦ ರಂದು ಖ್ಯಾತನಟ ಅಕ್ಷಯ್ ಕುಮಾರ್ ಉದ್ಘಾಟಿಸುವರು. ಗೋವಾದ ರಾಜಧಾನಿ ಪಣಜಿಯಲ್ಲಿರುವ ಕಲಾ ಅಕಾಡೆಮಿಯ ದರಾಯ ಕಲಾಸಂಗಮ್ ಮತ್ತು ದೀನನಾಥ್ ಮಂಗೇಶ್ಕರ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದೆ.
ಒಟ್ಟು ಹನ್ನೊಂದು ದಿನಗಳ ಉತ್ಸವದಲ್ಲಿ ೨೦೦ ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಂತಾರಾಷ್ಟ್ರೀಯ ವಿಭಾಗದಲ್ಲಿನ ಸ್ಪರ್ಧೆಯಲ್ಲದೇ, ಜಾಗತಿಕ ಸಿನಿಮಾ, ವಿದೇಶಿ ನಿರ್ದೇಶಕರ ಹಲವು ಅತ್ಯುತ್ತಮ ಸಿನಿಮಾಗಳು (ವಾಚಿಕೆ ಮಾದರಿ), ನೆನಪು, ನಿರ್ದಿಷ್ಟ ದೇಶಗಳ ಮೇಲೆ ಬೆಳಕು ಚೆಲ್ಲುವಂಥ ಸಿನಿಮಾಗಳು, ಭಾರತೀಯ ಪನೋರಮಾ, ಭಾರತೀಯ ನಿರ್ದೇಶಕರ ವಾಚಿಕೆ ಮತ್ತು ಸ್ಮರಣೆ, ತಾಂತ್ರಿಕ ಕಾರ‍್ಯಾಗಾರಗಳು ನಡೆಯಲಿವೆ.
ಭಾರತೀಯ ಸಿನಿಮಾ ನೂರು ವರ್ಷದ ನೆನಪಿಗೆ “ಶತಮಾನೋತ್ಸವ ಪ್ರಶಸ್ತಿ’ ಪ್ರಶಸ್ತಿ (ಬೆಳ್ಳಿ ಪಾರಿತೋಷಕ, ಹತ್ತು ಲಕ್ಷ ರೂ. ನಗದು)ಯನ್ನು ನೀಡಲಾಗುತ್ತಿದೆ.

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms