Showing posts with label ಗೋವೆ ಚಿತ್ರೋತ್ಸವ. Show all posts
Showing posts with label ಗೋವೆ ಚಿತ್ರೋತ್ಸವ. Show all posts

Tuesday, November 20, 2012

ನವಿಲಿನ ಕುಣಿತಕ್ಕೆ ಮತ್ತಷ್ಟು ರಂಗು ಬೇಕಿತ್ತು


ವರದಿ : ಅರವಿಂದ ನಾವಡ
43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಯನ್ನು ಕಂಡವರಿಗೆ ಅನ್ನಿಸಿದ್ದು ಇದೇ. ತೀರಾ ಸಪ್ಪೆ ಎನಿಸುವ ನಿರೂಪಣೆಯಿಂದ ಹಿಡಿದು, ಹನ್ನೊಂದು ದಿನದ ಸಂಭ್ರಮಕ್ಕೆ ಗೆಜ್ಜೆ ಕಟ್ಟುವ ಕೆಲಸವಾಗಲೇ ಇಲ್ಲ.
ಈ ಬಾರಿಯದು ಬರಿದೇ 43 ನೇ ಚಿತ್ರೋತ್ಸವವಾಗಿರಲಿಲ್ಲ. ಜತೆಗೆ ಭಾರತೀಯ ಸಿನಿಮಾದ ಶತಮಾನೋತ್ಸವ ವರ್ಷವೂ ಆಗಿತ್ತು. ಆದರೆ, ಇಡೀ ಉದ್ಘಾಟನಾ ಸಮಾರಂಭದಲ್ಲಿ ಆ ಉತ್ಸಾಹವೇ ಇರಲಿಲ್ಲ.
ಹಲವು ಕಾರಣಗಳಿಂದ ಬಹುಮುಖ್ಯ ಉತ್ಸವವಾಗಿರುವ ಇದರ ಉದ್ಘಾಟನೆ ಬಹಳಷ್ಟು ಸಂಭ್ರಮ ಮತ್ತು ಬದುಕಿನ ಸವಿನೆನಪಾಗಿ ಉಳಿದೀತೆಂದು ಬಂದವರಿಗೆ ಸಿಕ್ಕಿದ್ದು ಮತ್ತೊಂದು ಸಮಾರಂಭವಷ್ಟೇ.
ಔಪಚಾರಿಕ ಸಮಾರಂಭವನ್ನು ಹೊರತುಪಡಿಸಿದರೆ ಬೇರೇನೂ ಇರಲಿಲ್ಲ. ಸರೋಜ್ ಖಾನ್ ಸಂಯೋಜಿಸಿದ ನೂರು ವರ್ಷ ಭಾರತೀಯ ಸಿನಿಮಾ ಕುರಿತ “ನೃತ್ಯರೂಪಕ” ಒಂದಷ್ಟು ಹೊತ್ತು ರಂಜಿಸಿದರೆ, ಕೈಲಾಸ್ ಖೇರ್ ಅವರ ಒಂದಿಷ್ಟು ಗೀತೆಗಳು ಖುಷಿ ನೀಡಿದವು.
‘ಕಾರ್ಯಕ್ರಮ ಇನ್ನಷ್ಟು ಗ್ರ್ಯಾಂಡ್ ಆಗಿರಬೇಕಿತ್ತು’ ಎಂದು ಹೇಳಿದವರು ಗೋವಾದ ಶ್ಯಾಂ ಸುಂದರ್. ಇಂಥ ಅಭಿಪ್ರಾಯ ಹಲವೆಡೆ ಕೇಳಿಬಂದಿತು.
ಟ್ರ್ಯಾಕ್
ಕೈಲಾಸ್ ಖೇರ್, ಸುಮಾರು ಏಳೆಂಟು ಹಾಡುಗಳನ್ನು ಹಾಡಿದರು. ಅದೂ ನೈಜಗಾನವೆನಿಸಿರಲಿಲ್ಲ. ಹಿಂದೆ ಟ್ರ್ಯಾಕ್ ಹಾಕಿಕೊಂಡು ಫಾಲೋ ಮಾಡಿದಂತಿತ್ತು.
ಎಕ್ಕ ರಾಜರಾಣಿ
ಇಡೀ ಚಲನಚಿತ್ರೋತ್ಸವದಲ್ಲಿ ಕನ್ನಡದ ಮಾತು ಕೇಳಿದ್ದೆಂದರೆ ಕೈಲಾಶ್ ಖೇರ್, "ಜಾಕಿ" ಚಿತ್ರದ "ಎಕ್ಕ ರಾಜರಾಣಿ" ಗೀತೆಯನ್ನು ಟ್ರ್ಯಾಕ್ ನಲ್ಲಿ ಹೇಳಿದ್ದು. ಇಷ್ಟು ಬಿಟ್ಟರೆ ಬೇರೇನೂ ಇರಲಿಲ್ಲ.
ಮೊದಲ ಚಿತ್ರಕ್ಕೆ ಫುಲ್ ರಶ್
ಲೈಫ್ ಆಫ್ ಫೈ ಚಿತ್ರಕ್ಕೆ ಸಿನಿಮಾ ಮಂದಿರ ಹೌಸ್ ಫುಲ್. ಕಲಾ ಅಕಾಡೆಮಿಯಲ್ಲಿ ಏರ್ಪಡಿಸಲಾಗಿದ್ದ ಉತ್ಸವದ ಮೊದಲ ಚಿತ್ರಕ್ಕೆ ಸಿನಿಮಾ ಮಂದಿರ ಭರ್ತಿಯಾಗಿ ಎರಡೂ ಕಡೆ ಸಾಲಾಗಿ ನಿಂತುಕೊಂಡೇ ಇಡೀ ಸಿನಿಮಾ ವೀಕ್ಷಿಸಿದವರು ಹಲವರು.
ಉದ್ಘಾಟನೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಚಿತ್ರಮಂದಿರದತ್ತ ಎಲ್ಲರೂ ದೌಡಾಯಿಸಿದ್ದರಿಂದ ಸ್ವಲ್ಪ ನೂಕು ನುಗ್ಗಲಿನ ಅನುಭವವಾಯಿತು. ಆದರೂ ಗಂಭೀರ ಸಮಸ್ಯೆಯಾಗಲಿಲ್ಲ. ಥ್ರೀಡಿ ಚಲನಚಿತ್ರವಾಗಿದ್ದರಿಂದ ಹಲವರು ಇಷ್ಟ ಪಟ್ಟರು.

ಸಿನಿಮಾ ನನ್ನಿಷ್ಟದ ಮಾಧ್ಯಮ : ಜಾನುಸಿ


ಪಣಜಿ : ಬಹುನಿರೀಕ್ಷಿತ ನವಿಲು ಕುಣಿತ ಆರಂಭಗೊಂಡಿದೆ !
ಹನ್ನೊಂದುದಿನ ಇನ್ನೇನಿದ್ದರೂ ನವಿಲಿನ ಕುಣಿತವಷ್ಟೇ. ಕಣ್ತುಂಬಿಕೊಳ್ಳುವ ಉತ್ಸಾಹವಿರಬೇಕು ಅಷ್ಟೇ.
ಗೋವೆಯ ರಾಜಧಾನಿ ಪಣಜಿಯ ಕಲಾ ಅಕಾಡೆಮಿ ಬಳಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಮಂಗಳವಾರ ಸಂಜೆ ಖ್ಯಾತ ನಟ ಅಕ್ಷಯ್ ಕುಮಾರ್ 43 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
"ನನ್ನ ಬದುಕಿಗೆ ಹೆಚ್ಚು ಖುಷಿಯನ್ನು ತುಂಬಿರುವುದು ಈ ಸಿನಿಮಾ. ಚಿಕ್ಕಂದಿನಿಂದಲೂ ಮೋಹವಾಗಿಯೇ ಉಳಿದಿದ್ದ ಸಿನಿಮಾ ಮಾಧ್ಯಮ ಇಂದಿಗೂ ಆ ಮೋಹಕತೆಯನ್ನು ಉಳಿಸಿಕೊಂಡಿದೆ, ಇಲ್ಲಿವರೆಗೂ ತಂದು ನಿಲ್ಲಿಸಿರುವ ಈ ಮಾಧ್ಯಮವನ್ನು ಮರೆಯಲಾಗದು’ ಎಂದವರು ಅಕ್ಷಯ್ ಕುಮಾರ್.
ಹೆಸರಾಂತ ಪೊಲಿಶ್ ಚಿತ್ರ ನಿರ್ದೇಶಕ ಕ್ರಿಸ್ಟೋಫ್ ಜಾನುಸಿಯವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ, “ಕೇಂದ್ರ ಸರಕಾರ ಸಿನಿಮಾ ಮಾಧ್ಯಮವನ್ನು ಹೆಚ್ಚು ಜನಪ್ರಿಯಗೊಳಿಸಲು ಸಾಕಷ್ಟು ಯೋಜನೆ ಹಮ್ಮಿಕೊಂಡಿದೆ. ರಾಷ್ಟ್ರೀಯ ಸಿನಿಮಾ ಪಾರಂಪರಿಕ ಮಿಷನ್ ಸ್ಥಾಪಿಸುವ ಇರಾದೆಯನ್ನು ಹೊಂದಿದ್ದು, ಸದ್ಯವೇ ಜಾರಿಗೊಳ್ಳಲಿದೆ’ ಎಂದರು.
ಇದೇ ಸಂದರ್ಭದಲ್ಲಿ, “ಅತ್ಯಂತ ಪ್ರಭಾವಶಾಲಿಯಾಧ ಸಿನಿಮಾ ಮಾಧ್ಯಮವನ್ನು ಬಳಸಿಕೊಂಡು ಇನ್ನಷ್ಟು ಬೃಹತ್ ಪ್ರಮಾಣದಲ್ಲಿ ಜನರನ್ನು ರಚನಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು’ ಎಂದು ಸಿನಿಮಾ ನಿರ್ದೇಶಕರನ್ನು ಮನವಿ ಮಾಡಿದರು.
ಜೀವಮಾನ ಸಾಧನೆಗೆ ಪ್ರಶಸ್ತಿ ಪುರಸ್ಕರಿಸಿದ ಕ್ರಿಸ್ಟೋಫ್ ಜಾನುಸಿ, “ ಗೌರವ ಇನ್ನಷ್ಟು ಸಿನಿಮಾಗಳನ್ನು ಮಾಡುವ ಹುರುಪು ತುಂಬಿದೆ,. ಚಲಿಸುವ ಚಿತ್ರಗಳು ಮತ್ತು ಧ್ವನಿಯನ್ನು ಬಳಸಿಕೊಂಡು ನಮ್ಮ ಜೀವನದ ಅನುಭವವನ್ನು ಕಥೆಯಾಗಿ ಹೇಳಲು ಇರುವ  ಮಾಧ್ಯಮದಿಂದ ದೂರವುಳಿಯಲು ನನ್ನಿಂದಾಗದು. 21 ನೇ ಶತಮಾನವನ್ನು ಏಷ್ಯಾದ ಶತಮಾನವೆಂದು ಹೇಳಲಾಗುತ್ತಿದೆ. ಆದರೆ, ನನ್ನ ಅನಿಸಿಕೆಯಲ್ಲಿ ಅದು ಭಾರತದ ಶತಮಾನ’ಎಂದರು.
ಗೋವಾವನ್ನು ಅತ್ಯುತ್ತಮ ಚಿತ್ರನಗರಿಯನ್ನಾಗಿಸುವ ಹೊಣೆ ಎಂಟು ವರ್ಷದ ಹಿಂದೆ ಕೈಗೆತ್ತಿಕೊಂಡಿದ್ದೆ. ಈ ವರ್ಷ ಆ ಅಭಿದಾನ ದೊರೆತಿದೆ. ಆದರೆ ನಮ್ಮ ಕೆಲಸ ಇಲ್ಲಿಗೆ ನಿಲ್ಲದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಮತ್ತಷ್ಟು ವೈಭವೋಪೇತಗೊಳಿಸುವ ಕೆಲಸ ಇಂದಿನಿಂದ ಆರಂಭಗೊಳ್ಳಲಿದೆ ಎಂದವರು ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್.
ಇದೇ ಸಂದರ್ಭದಲ್ಲಿ ಸಿನಿಮಾ ತೀರ್ಪುಗಾರರಿಗೆ ಸನ್ಮಾನಿಸಲಾಯಿತು. ಅಸ್ಸಾಮಿ ಚಿತ್ರ ನಿರ್ದೇಶಕ ಜಾನು ಬರುವಾ ಅವರನ್ನು ಗೌರವಿಸಲಾಯಿತು. ಉತ್ಸವದ ಆರಂಭದ ಚಿತ್ರ “ಲೈಫ್ ಆಫ್ ಫೈ” ನಲ್ಲಿ ನಟಿಸಿರುವ ತಬು ಮತ್ತು ಇರ್ಫಾನ್ ಖಾನ್ ರನ್ನೂ ಸನ್ಮಾನಿಸಲಾಯಿತು. ಗೋವಾದ ರಾಜ್ಯಪಾಲರಾದ ವಾಂಚೂ, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಉದಯ ಕುಮಾರ್ ವರ್ಮ, ಗೋವಾದ ಕಾರ್ಯದರ್ಶಿ ವಿಜಯನ್, ನಟಿ ಕಾಜಲ್ ಅಗರ್ವಾಲ್ ಉಪಸ್ಥಿತರಿದ್ದರು.

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms